Tuesday, August 25, 2009

ಗ್ರಾಮೀಣ ಸಮಸ್ಯೆ ಬೆಳಕಿಗೆ ತನ್ನಿ: ಪಾಲೆಮಾರ‍್ ಕಿವಿಮಾತು


೨೦೦೮ನೇ ಸಾಲಿನ ಪ.ಗೋ ಪ್ರಶಸ್ತಿಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪರಿಸರ, ಜೀವಿಶಾಸ್ತ್ರ ಮತ್ತು ಬಂದರು ಖಾತೆ ಸಚಿವ ಕೃಷ್ಣಪಾಲೆಮಾರ‍್ ಅವರು ಪತ್ರಕರ್ತ ಹೃಷಿಕೇಶ್ ಧರ್ಮಸ್ಥಳ ಅವರಿಗೆ ಪ್ರದಾನ ಮಾಡಿದರು.

ಕನ್ನಡಪ್ರಭ ಉಜಿರೆ ವರದಿಗಾರರಾಗಿರುವ ಹೃಷಿಕೇಶ್ ಧರ್ಮಸ್ಥಳ ಅವರು ಬರೆದ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ೨೦೦೮ರ ಅಕ್ಟೋಬರ ೩ರಂದು ಪ್ರಕಟಗೊಂಡಿತ್ತು.

ಗ್ರಾಮೀಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅಥವಾ ಅಲ್ಲಿನ ಧನಾತ್ಮಕ ಬೆಳವಣಿಗೆಗಳ ಬಗ್ಗೆ ಮಾಡಲಾದ ಅತ್ಯುತ್ತಮ ವರದಿಯನ್ನು ಪ.ಗೋ ಪ್ರಶಸ್ತಿಗೆ ಆರಿಸಲಾಗುತ್ತಿದೆ. ೧೯೯೯ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಹಿರಿಯ ಪತ್ರಕರ್ತ ಯು.ನರಸಿಂಹರಾವ್ ಅವರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸಚಿವ ಕೃಷ್ಣ ಪಾಲೆಮಾರ‍್ ಮಾತನಾಡಿ, ಹಿಂದಿನ ಪತ್ರಕರ್ತರಂತೆ ಇಂದಿನ ಯುವ ಪತ್ರಕರ್ತರೂ ನಿಷ್ಠುರವಾಗಿದ್ದು ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಗಳಲ್ಲಿ ಆಗುವಂತಹ ಸಮಸ್ಯೆಗಳನ್ನು ವರದಿಗಾರರು ಗಮನಕ್ಕೆ ತಂದಾಗ ಸರ್ಕಾರಕ್ಕೂ ತಿಳಿಯುತ್ತದೆ, ಆ ಮೂಲಕ ಅವುಗಳನ್ನು ಬಗೆಹರಿಸಬಹುದು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್‌.ಟಿ ಬಾಳೆಪುಣಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಹರೀಶ್ ರೈ, ಸಂಘದ ಖಜಾಂಚಿ ಯೋಗೀಶ ಹೊಳ್ಳ ಪಾಲ್ಗೊಂಡರು. ಪ.ಗೋ ಕುಟುಂಬದವರು, ನರಸಿಂಹರಾವ್ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಹಾಜರಿದ್ದರು

No comments: