Monday, August 17, 2009

ಹೃಷಿಕೇಶ್‌ಗೆ ಪ.ಗೋ ಪ್ರಶಸ್ತಿ

ದಿವಂಗತರಾಗಿರುವ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅತ್ಯುತ್ತಮ ಗ್ರಾಮೀಣವರದಿಗಾರಿಕೆ ಪ್ರಶಸ್ತಿಗೆ ಈ ಬಾರಿ ಕನ್ನಡಪ್ರಭ ಪತ್ರಿಕೆಯ ಧರ್ಮಸ್ಥಳ-ಉಜಿರೆ ಸುದ್ದಿಗಾರ ಹೃಷಿಕೇಶ್ ಧರ್ಮಸ್ಥಳ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭದಲ್ಲಿ ಅಕ್ಟೋಬರ‍್ ೩, ೨೦೦೮ರಲ್ಲಿ ಪ್ರಕಟಗೊಂಡ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ಪ್ರಶಸ್ತಿ ಗಳಿಸಿದೆ. ಇದು ೨೦೦೮ರ ಸಾಲಿನ ಪ್ರಶಸ್ತಿಯಾಗಿರುತ್ತದೆ.
ಗ್ರಾಮೀಣಮಟ್ಟದಲ್ಲಿ ಇರುವ ಅನೇಕ ಸಮಸ್ಯೆಗಳು, ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲಿರುವ ಮಾದರಿಗಳು ಇತ್ಯಾದಿಗಳ ಬಗ್ಗೆ ಬರೆಯಲಾದ ಅತ್ಯುತ್ತಮ ವರದಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ ಅಂಕಣ ಬರೆಯುತ್ತಿದ್ದವರು.
ಪ.ಗೋ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆಸುವ ನಿರ್ಣಯವನ್ನು ಹಮ್ಮಿಕೊಂಡಿದೆ. ಈ ವರ್ಷ ಮೊದಲ ಬಾರಿಗೆ ಪತ್ರಕರ್ತರ ಸಂಘ ಪ್ರಶಸ್ತಿ ನೀಡುತ್ತಿದೆ.

No comments: